ಆಗಸ್ಟ್ 24ರಿಂದ 28ರವರೆಗೆ ಮಂಗಳೂರಿನ ಶ್ರೀ ಯೋಗೇಶ್ವರ ಕದ್ರಿ ಮಠದಲ್ಲಿ ಶ್ರೀಮದ್ ಲಕ್ಷ್ಮೀ ನಾರಾಯಣ ಮಹಾಯಾಗ
ಮಂಗಳೂರು: ಲೋಕಲ್ಯಾಣ, ಧರ್ಮ ಸಂವರ್ಧನೆ ಹಾಗೂ ಸರ್ವಜನ ಕ್ಷೇಮದ ಸಂಕಲ್ಪದೊಂದಿಗೆ ಜಗದಾಚಾರ್ಯ ಸ್ವಾಮಿ ಅಖಿಲೇಶ್ ಜೀ ಮಹಾರಾಜ್ ಸೇವಾ ಸಂಸ್ಥಾನ ಮತ್ತು ದಿ ಸ್ಯಾಫ್ರನ್ ಫ್ರಂಟ್ ಇದರ ಸಹಯೋಗದೊಂದಿಗೆ ಆಗಸ್ಟ್ 24ರಿಂದ 28ರವರೆಗೆ ಮಂಗಳೂರಿನ ಶ್ರೀ ಯೋಗೇಶ್ವರ ಕದ್ರಿ ಮಠದಲ್ಲಿ ಶ್ರೀಮದ್ ಲಕ್ಷ್ಮೀ ನಾರಾಯಣ ಮಹಾಯಾಗ ಆಯೋಜಿಸಲಾಗಿದೆ ಎಂದು ಜಗದಾಚಾರ್ಯ ಸ್ವಾಮಿ ಅಖಿಲೇಶ್ ಜೀ ಮಹಾರಾಜ್ ಸೇವಾ ಸಂಸ್ಥಾನದ ಕಾರ್ಯಾಧ್ಯಕ್ಷ ದಿನಕರ ಶೆಟ್ಟಿ ಹೇಳಿದರು.

ಮಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಅವರು ಮಾಹಿತಿ ನೀಡಿ, ದ.ಕ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ನಡೆಯುತ್ತಿರುವ ಮಹಾಯಾಗ ಇದಾಗಿದ್ದು ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ನೆರವೇರಲಿದೆ. ಮಹಾಯಾಗದ ಆರಂಭದ ಅಂಗವಾಗಿ ಆ.24ರಂದು ಬೆಳಿಗ್ಗೆ 8 ಗಂಟೆಗೆ ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನದಿಂದ ಶ್ರೀ ಯೋಗೇಶ್ವರ ಮಠದವರೆಗೆ ಕಳಶ ಯಾತ್ರೆ ನಡೆಯಲಿದೆ ಎಂದರು.
ಆಗಸ್ಟ್ 28ರಂದು ಪೂರ್ಣಾಹುತಿ ನೆರವೇರಲಿದೆ. ಶ್ರೀ ಲಕ್ಷ್ಮೀ ನಾರಾಯಣರ ಅನುಗ್ರಹ ಹಾಗೂ ಪೂಜ್ಯ ಗುರುಗಳ ಆಶೀರ್ವಾದ ಪಡೆದು ಭಾಗವಹಿಸುವಂತೆ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಗೌರವಾಧ್ಯಕ್ಷ ಕಿರಣ್ ಕುಮಾರ್ ಜೋಗಿ, ಪ್ರಧಾನ ಸಂಚಾಲಕ ರಾಜೇಶ್ ಪವಿತ್ರನ್ ಮತ್ತಿತ್ತರರು ಉಪಸ್ಥಿತರಿದ್ರು.
